November 28, 2010



ಸೋನೆ ಮಳೆಯಲ್ಲಿ ನಿನ್ನ ಕಣ್ಣ ಸನ್ನೆಯದೇ ನೆನಪು ..
ಸೋಕುವ ತಂಗಾಳಿಯಲಿ ನಿನ್ನದೇ ಸುಂದರ ಕನಸು ..
ಸುತ್ತಮುತ್ತಲು ತುಂಬಿರುವ ಮಬ್ಬುಗತ್ತಲ್ಲಲ್ಲಿ ,ನಿನ್ನ ಬೆಚ್ಚನೆ ಒಲವಿನದೇ ಚಿಂತೆ ..
ಮಳೆಯ ಹನಿಗಳ ಬಿಂದುವಲ್ಲಿಯು ಕಾಣುತಿರುವುದು, ನಿನ್ನದೇ ಪ್ರತಿಬಿಂಬವಂತೆ..
ಪಾವನವಾಯಿತು ಪ್ರಕೃತಿ, ಮಳೆ ನೀರಲ್ಲಿ ತೋಯ್ದು ..
ನೂತನವಾಯಿತು ಮನವು , ನಿನ್ನ ನೆನಪಿನ ಹನಿಯಲ್ಲಿ ನೆನೆದು :) :)










November 14, 2010



ಮನದ ಭಾವಗಳಿಗೆ ನದಿಯೊಂದು ಬೇಕಿದೆ..
ಆ ನದಿ ಹರಿದು ಗೆಳೆಯನ ಮನ ಸೇರಬೇಕಿದೆ ..
ಕಲ್ಲು ಹೃದಯವ ಕರಗಿಸಬೇಕಿದೆ..
ಸ್ನೇಹದ ಸುಮವ ಅರಳಿಸಬೇಕಿದೆ ..

ಅಪನಂಬಿಕೆಯ ಕಳೆ ತೆಗೆದು..
ಅಕ್ಕರೆಯ ನೀರೆರೆದು..
ಅದ ಕಾಪಾಡುವ ಹೊಣೆ ನನ್ನದೇ ಆಗಿದೆ..

ಹೂವು ಅರಳಿ ಪರಿಮಳವ ಚೆಲ್ಲಿದಾಗ,
ಗೆಳೆಯನ ಕಣ್ಣಲಿ ಸಂತಸವದು ಮಿಂಚಿದಾಗ,
ನಾ ಕಂಡ ಕನಸೆಲ್ಲ ನನಸಾಗದೇ ಆಗ..
ನಾ ಕಂಡ ಕನಸೆಲ್ಲ ನನಸಾಗದೇ ಬೇಗ ? :) :)


ತುಂಬಾ ಕೆಲಸವಿದ್ದ ಕಾರಣ ಗೆಳೆಯರ ಬ್ಲಾಗ್ ಗಳಿಗೆ ಭೇಟಿನೀಡಲು ಆಗಲಿಲ್ಲ ..ನಿಮ್ಮ ಸಹಕಾರ ಹೀಗೆ ಇರಲಿ.

October 10, 2010



ಸಾಗರದ ಅಲೆ ನಾನು ..
ತಂಪು ತಂಗಾಳಿಯ ಗೆಳತಿಯು ..
ನಾವಿಬ್ಬರು ಕೂಡಿ ಆಡುತಿರಲು ,ಹುಣ್ಣಿಮೆಯ ಚಂದ್ರನಿಗೂ ಮುನಿಸು ..
ನಮ್ಮೊಡನೆ ಸೇರಲು ಪಾಪ ಅವನಿಗೂ ಮನಸು ..
ಸೇರಿಸಿಕೊಂಡು ಅವನನ್ನು ,ಆಡಲು ಹೊರಟರೆ ನಾವು ,ಚುಕ್ಕಿಗಳ ಕಣ್ಣಲಿ ನೀರು ..
ಎಲ್ಲರನ್ನು ಒಂದುಗೂಡಿಸಿ ,ಎಲ್ಲರ ಮನವೊಲಿಸಿ ಆಟ ಶುರು ಮಾಡುವುದರೊಳಗೆ,
ನಿಶೆಯು ಹೊರಟಿತು ತಾ ಮನೆಗೆ ,
ಕೊನೆಯಾಯ್ತು ಮೊದಲಾಗದ ಆಟ ಅಲ್ಲಿಗೆ !!


October 3, 2010

ಮನದ ನೂರು ಭಾವಕೆ ಅರ್ಥ ಹುಡುಕಲು ಹೋಗಿ ಮನ ತೊಳಲಾಡಿದೆ..
ಯಾವುದು ಸರಿಯೋ ಯಾವುದು ತಪ್ಪೋ ತಾ ಅರಿಯದೆ ಕೊರಗಿದೆ..
ಸರಿ ಇದ್ದರು ಆಡಿದ ಮಾತು, ಹೇಳಿದ ರೀತಿ ತಪ್ಪಾದರೆ ,ನೋವೆಂಬುದು ತಪ್ಪಿದಲ್ಲ..
ಎಷ್ಟು ಕಾಡಿ ಬೇಡಿದರು,ಎಷ್ಟು ಕ್ಷಮೆ ಕೇಳಿದರು,ಕಲ್ಲಾದ ಮನವು ಕರಗದಲ್ಲ..

ಏನು ಮಾಡಲಿ ನಾನು,ನಿನ್ನ ನೋಯಿಸಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ..
ಕಾಲನ ಆಟಕೆ ,ಬದುಕು ಕಲಿಸುವ ಪಾಠಕೆ ಯಾರನು ದೂರುವುದು ತರವಲ್ಲ..
ಒಮ್ಮೊಮ್ಮೆ ಅನಿಸುವುದು ಬದುಕೆಷ್ಟು ಕ್ಲಿಷ್ಟವು ಭಾವನೆಗಳಿಂದ..
ಆದರೆ ಮರು ಕ್ಷಣ ಮನ ನುಡಿವುದು ಭಾವಗಳಿರದೆ ಬದುಕೆಂಬುದಿಲ್ಲ, ಮರುಳೆ ಬದುಕೆಂಬುದಿಲ್ಲ !!